Saturday, February 14, 2015

ಹಿರಿಯ ನಾಗರೀಕರ ನಡಿಗೆ

"ನಾವು ಹಿರಿಯರು, ನೀವು ಕಿರಿಯರು...ಕೂಡಿರಲು ಚೈತನ್ಯವದು ಅಪ್ರತಿಮ"
ಈ ಶನಿವಾರ ಎಂದಿನಂತೆ ಮಾಮೂಲಿಯಾಗಿರದೆ ವಿಭಿನ್ನ ಹಾಗೂ ವಿಶಿಷ್ಟವಾಗಿದ್ದು, ಯುವಕರೂ ನಾಚುವಂತೆ ಹಿರಿಯರು ಅದಮ್ಯ ಉತ್ಸಾಹದೊಂದಿಗೆ ಓಟ/ನಡಿಗೆಯಲ್ಲಿ ಭಾಗವಹಿಸಿದ್ದು.
ವಯಸ್ಸು ದೇಹಕ್ಕೆ ಹೊರತು ಮನಸ್ಸು ಹಾಗೂ ಉತ್ಸಾಹಕ್ಕಲ್ಲ ಎಂಬ ಸಂದೇಶವನ್ನು ತಮ್ಮ ಪಾಲ್ಗೊಳ್ಳುವಿಕೆಯಿಂದ ಸಾರಿ ಹೇಳಿದರು. ೮೫ಕ್ಕೂ ಮೇಲ್ಪಟ್ಟ ವಯಸ್ಸಿನ ಹಿರಿಯರೂ ಅತ್ಯುತ್ಸಾಹದಿಂದ ಭಾಗವಹಿಸಿದ್ದು ಅಚ್ಚರಿಯ ಸಂಗತಿ.
ಕರ್ನಾಟಕ ಹಿರಿಯ ನಾಗರೀಕರ ಒಕ್ಕೂಟವು ಅವಿರತದ ಸಹಯೋಗದೊಂದಿಗೆ ಆಯೋಜಿಸಿದ್ದ ೧.೫ ಕಿಮೀ ದೂರದ "ಹಿರಿಯ ನಾಗರೀಕರ ನಡಿಗೆ/ ಓಟದಲ್ಲಿ" ಬೆಂಗಳೂರು ಹಾಗೂ ಸುತ್ತಮುತ್ತಲಿಂದ ಬಂದ ಸುಮಾರು ೩೫೦ಕ್ಕೂ ಹೆಚ್ಚು ಹಿರಿಯರು ಭಾಗವಹಿಸಿದ್ದರು. ಮನಸಾರೆ ಖುಷಿಪಟ್ಟು, ಕಿರಿಯರ ಬೆಂಬಲವನ್ನು, ಪ್ರಯತ್ನವನ್ನು ಬೆನ್ನು ತಟ್ಟಿ ಶ್ಲಾಘಿಸಿದರು.
ಅವಿರತಕ್ಕೆ ಈ ಅವಕಾಶವನ್ನು ಒದಗಿಸಿದ ಹಿರಿಯ ನಾಗರೀಕರ ಒಕ್ಕೂಟಕ್ಕೆ, ನಮ್ಮ ತಂಡದ ಪರವಾಗಿ ತುಂಬು ಹೃದಯದ ಧನ್ಯವಾದಗಳು.
ಹಾಗೆಯೇ ಒಗ್ಗಟ್ಟಿನಲ್ಲಿ ಬಲವಿದೆ, ಯಶಸ್ಸಿದೆ ಎಂದು ತೋರಿದ, ಭಾಗವಿಸಿ ಮತ್ತು ಬೆಂಬಲಿಸಿದ ಅವಿರತದ ಎಲ್ಲ ಸದಸ್ಯರಿಗೂ ಹೃತ್ಪೂರ್ವಕ ಅಭಿನಂದನೆಗಳು..!