Sunday, May 25, 2014

ಎಲ್ಲೋ ಜೋಗಪ್ಪ ನಿನ್ನರಮನೆ...ಜೋಗಿ ಸಂಭ್ರಮ

ನಿನ್ನ ಮನದಲ್ಲೇ ನನ್ನರಮನೆ ಎಂದು ಸಾರಿ ಹೋದ ಜೋಗಿ...!!

ಹೌದು..ನಿನ್ನೆ ನಡೆದ ಜೋಗಿ ಆಟ ಪ್ರೇಕ್ಷಕರ ಮನಸೂರೆಗೊಂಡಿತು! ಮಲೆನಾಡಿನ ಈ ವಿಶಿಷ್ಟ ಕಲೆ ಬೆಂಗಳೂರಿಗರನ್ನು ಆಕರ್ಷಿಸಿತು. ಶ್ರೀ ಕಾಲಭೈರವ ಜೋಗಿ ಕಲಾ ಸ೦ಘ, ಹೊಸೂರು, ಸಾಗರ ತಾ||, ಶಿವಮೊಗ್ಗ ಜಿಲ್ಲೆಯ ಕೆ. ಗುಡ್ಡಪ್ಪ ಜೋಗಿ, ನಾಗರಾಜ ಜೋಗಿ ಮತ್ತು ತಂಡದವರು "ವೀರಸೇನ ಕೋಕಿಲೆ" ಅರ್ಥಾತ್ "ವಸನಶೀಲ ಕುಸುಮಮ೦ಜರಿ" ಎ೦ಬ ಕಥಾಭಾಗವನ್ನು ಜೋಗಿ ಪದದ ಶೈಲಿಯಲ್ಲಿ ನಿರೂಪಿಸಿ ಉತ್ತಮವಾಗಿ ಹಾಡಿದರು.

ರಸವತ್ತಾದ ಲಾವಣಿಗಳು, ಪದ್ಯಗಳು, ಹಾಡುಗಳ ಕಟ್ಟಿ; ಮುಖ್ಯ ಕಥಾಭಾಗದ ನಡುವೆ ಸಣ್ಣ ಸಣ್ಣ ಉಪಕಥೆಗಳ ಪೋಣಿಸಿ ಹೇಳುವ ಪರಿ ಅತ್ಯುತ್ತಮವಾಗಿತ್ತು. ಅತ್ತೆ-ಸೊಸೆಯಂದಿರ ಬಾಂಧವ್ಯ, ಹಿಂದಿನ ದಿನಗಳು & ಇಂದಿನ ದಿನಗಳ ಬದಲಾವಣೆ, ವರದಕ್ಷಿಣೆಯ ಬಗ್ಗೆ, ತಾಯಿಯ ಬಗ್ಗೆ, ತಾಯಿ-ಮಗಳ ಮಮತೆಯ ತುಡಿತದ ಬಗೆಗಿನ ಸುಂದರವಾದ & ಹಾಸ್ಯಪೂರ್ವಕ ಲಾವಣಿಗಳನ್ನು ಪ್ರಸ್ತುತಪಡಿಸಿದರು.

ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಹಾಜರಿದ್ದು, ಕಾರ್ಯಕ್ರಮದ ಕೊನೆತನಕ ಜೋಗಿ ಸಂಭ್ರಮದಲ್ಲಿ ಭಾಗಿಯಾಗಿ & ಅವಿರತದ ಕಾರ್ಯಗಳಿಗೆ ಬೆನ್ನು ತಟ್ಟಿದರು.

ಅವಿರತದ ಈ ವಿಶೇಷ ಪ್ರಯೋಗ ಜನರ ಮೆಚ್ಚುಗೆಗೆ ಭಾಜನವಾಯಿತು. ಕಾರ್ಯಕ್ರಮಕ್ಕೆ ಸಹಕಾರಿಯಾದ ಎಲ್ಲ ಮಿತ್ರರಿಗೂ ಹಾಗು ತಾಳ್ಮೆಯಿಂದ ಕಥೆಯನ್ನು ಸವಿದ ಪ್ರೇಕ್ಷಕರಿಗೂ ನಮ್ಮ ಹೃತ್ಪೂರ್ವಕ ಅಭಿನಂದನೆಗಳು.

ಮತ್ತೆ-ಮತ್ತೆ ಉತ್ತೇಜನದ ನಿರೀಕ್ಷೆಯಲ್ಲಿ...

ಅವಿರತ ತಂಡ.


 




 
 


 

Thursday, May 22, 2014

"ಅವಿರತದಿಂದ ಮತ್ತೊಂದು ಅಪರೂಪದ ಪ್ರಯತ್ನ "

ನಿಮಗೆ ನೆನಪಿದೆಯಾ? ನಾವು ಸಣ್ಣವರಿದ್ದಾಗ ನಮ್ಮ ಅಜ್ಜ-ಅಜ್ಜಿ, ಅಪ್ಪ-ಅಮ್ಮ ನಮಗೆ ಕತೆ-ಹಾಡು ಹೇಳುವಾಗ ನಾವು ಮೂಗು,ಬಾಯಿ, ಕಣ್ಣರಳಿಸಿಕೊಂಡು ಕೇಳುತ್ತಿದ್ದ ಆ ದಿನಗಳು...ಆ ಕತೆಗಳು ನಮ್ಮ ಕಲ್ಪನಾಲೋಕವನ್ನು ಎಷ್ಟು ವಿಸ್ತಾರ ಮಾಡ್ತಾ ಇದ್ವು ಅಲ್ವಾ? ಆದರೆ ಈಗ ನಮ್ಮ ಮಕ್ಕಳಿಗೆ ಕತೆ-ಹಾಡು ಹೇಳುವಷ್ಟು ಸಮಯ ನಮಗಿದೆಯೇ? ಈ ಬೆಂಗಳೂರಿನ ಜೀವನದ ಜಂಜಾಟದಲ್ಲಿ ಮಕ್ಕಳಿಗೆ ಕತೆ ಹೇಳುವ ಇಷ್ಟವಿದ್ದರೂ ಸಮಯ ಹೊಂದಿಸೋದು ಕಷ್ಟ ಕಷ್ಟ ! ! ಬೇಸರ ಮಾಡಿಕೊಳ್ಳಬೇಡಿ ನಮ್ಮ ಬೆಂಗಳೂರಿನವರಿಗಾಗಿಯೇ ಹಾಡು-ಕತೆಗಳನ್ನು ಹೇಳಿ ರಂಜಿಸಲು ನಾವು ಮಲೆನಾಡಿನಿಂದ ಕತೆಗಾರರನ್ನು ಕರೆಸುತ್ತಿದ್ದೇವೆ. ಗುಡ್ಡಪ್ಪ ಜೋಗಿಗಳ ಜೋಳಿಗೆಯಲ್ಲಿ ಅದೆಂತಹ ಅದ್ಭುತ ಕತೆಗಳು-ಹಾಡುಗಳು ಅಡಗಿ ಕುಳಿತಿದ್ದಾವೋ ಏನೋ?

ಬನ್ನಿ ಆ ಕತೆ - ಹಾಡುಗಳನ್ನು "ಎಲ್ಲೋ ಜೋಗಪ್ಪ ನಿನ್ನರಮನೆ" ಕಾರ್ಯಕ್ರಮದಲ್ಲಿ ಒಟ್ಟಿಗೆ ಕುಳಿತು ಕೇಳಿ ಖುಷಿಪಡೋಣ.

ಇದೇ ಭಾನುವಾರ ಅಂದರೆ ಮೇ 25ನೇ ತಾರೀಖು ಸಂಜೆ 4.00 ಕ್ಕೆ
ಸ್ಥಳ : ಗ್ರಂಥಾಂಗಣ, ಕೇಂದ್ರೀಯ ಗ್ರಂಥಾಲಯ, ಹಂಪಿನಗರ (ಆರ್.ಪಿ.ಸಿ ಲೇಔಟ್), ವಿಜಯನಗರ ಬೆಂಗಳೂರು

ದಯವಿಟ್ಟು ಮನೆ ಮಂದಿಯೆಲ್ಲಾ ಬಂದು ಒಂದು ಅಪರೂಪದ ಜೋಗಿಯಾಟಕ್ಕೆ ಜೊತೆಯಾಗಿ.

ಬರ್ತೀರಾ ಅಲ್ವಾ? ಕಾಯ್ತಾ ಇರ್ತೀವಿ.....