Saturday, November 11, 2017

ನಮಗೀಗ ೧೦ ವರ್ಷ..!

"ಕೆರೆಯ ನೀರನ್ನು ಕೆರೆಗೆ ಚೆಲ್ಲಿ" ಎನ್ನುವ ಮಾತಿಗೆ ಪೂರಕವಾಗಿ ಸಮಾಜಕ್ಕೆ ನಮ್ಮಿಂದಾಗುವ ಅತ್ಯಲ್ಪ ಕಾರ್ಯಗಳನ್ನು ಮಾಡುವ ಸದ್ದುದೇಶದಿಂದ ಸಮಾನ ಮನಸ್ಸುಗಳಿಂದ ಹುಟ್ಟಿಕೊಂಡಿದ್ದು "ಅವಿರತ" ತಂಡ. ೨೦೦೭ರಲ್ಲಿ ಶುರುವಾದ ನಮ್ಮಯ ಪಯಣ ಇಲ್ಲಿಯವರೆಗೆ ಅಡೆತಡೆಯಿಲ್ಲದೆ ೧೦ ಸಾರ್ಥಕ ವರುಷಗಳನ್ನು ಪೂರೈಸಿದೆ. 


"ಎಲ್ಲರಿಂದ ಸಮಾಜ" ಎನ್ನುವ ಸತ್ಯಕ್ಕೆ, ನಂಬಿಕೆಗೆ ಪೂರಕವಾಗಿ ನಮ್ಮ ಪರಿಮಿತಿಯಲ್ಲಿ ಸಾಧ್ಯವಾಗುವ ಈ ಕೆಳಗಿನ ಕೆಲಸಗಳನ್ನು ಜಾಗರೂಕತೆಯಿಂದ ಆಯ್ದುಕೊಂಡು ಸ್ನೇಹಿತರ, ಬಂಧುಗಳ & ನಮ್ಮ ನಂಬಿದ ಹೃದಯಗಳ ಸಹಕಾರದಿಂದ ಮುನ್ನಡೆದಿದ್ದೇವೆ.
  • ನೋಟ್-ಪುಸ್ತಕ ವಿತರಣೆ
  • ವೃತ್ತಿ ದಾರಿದೀಪ
  • ಕಂಪ್ಯೂಟರ್ ಕಲಿಕೆ
  • ವಿಜ್ಞಾನ ಪ್ರಯೋಗಗಳು
  • ಆರೋಗ್ಯ ಶಿಬಿರ
  • ಕಲೆ-ಸಾಹಿತ್ಯ
  • ಮಾತು ಮಂಥನ
  • ದೇಸಿ ಸೊಗಡು
  • ಚಲನಚಿತ್ರ ಚರ್ಚೆ

ಉತ್ತಮ ಸಮಾಜದ ನಿರ್ಮಾಣಕ್ಕೆ & ಅಭಿವೃದ್ಧಿಗೆ "ಶಿಕ್ಷಣ" ಅತ್ಯವಶ್ಯಕ. ಶಿಕ್ಷಣದಿಂದ ಮಾತ್ರ ಬದಲಾವಣೆಯ ತಂಗಾಳಿ ಸಾಧ್ಯ. ಹಳ್ಳಿಗಳಲ್ಲಿ ಮಕ್ಕಳ ಶಿಕ್ಷಣದ ಉತ್ತೇಜನಕ್ಕಾಗಿ, ಆರ್ಥಿಕವಾಗಿ ಹಿಂದುಳಿದ ಪಾಲಕರ ಹೊರೆಯನ್ನು ತಗ್ಗಿಸುವುದ್ದಕ್ಕಾಗಿ ನಾವು ಕಂಡಕೊಂಡ ಮಾರ್ಗ ಎಂದರೆ ನೋಟ್ ಪುಸ್ತಕ ವಿತರಣೆ. ೧ ಶಾಲೆಯ ೩೦ ಮಕ್ಕಳಿಂದ ಆರಂಭವಾದ ನೋಟ್ ಪುಸ್ತಕ ವಿತರಣೆ, "ನನ್ನ ಶಾಲೆ - ನನ್ನ ಹೆಮ್ಮೆ” ಚಿಂತನೆಯ ಪರಿಣಾಮವಾಗಿ ಅವಿರತದ ವಾರ್ಷಿಕ ಯೋಜನೆಯಾಗಿ ರೂಪುಗೊಂಡು ಇಂದು ೧೭೦ಕ್ಕೂ ಹೆಚ್ಚು ಶಾಲೆಗಳು ೨೫೦೦೦ಕ್ಕೂ ಹೆಚ್ಚು ಮಕ್ಕಳನ್ನು ತಲುಪಿದ್ದು ನಮ್ಮ ಹೆಮ್ಮೆ. ಇದರಲ್ಲಿ ೯೯% ಹಳ್ಳಿಯ ಶಾಲೆಗಳ ಮಕ್ಕಳೇ ಫಲಾನುಭವಿಗಳು. ೧೦ ವರ್ಷದ ಪಯಣದಲ್ಲಿ ಸಾವಿರಾರು ಮಕ್ಕಳ ಒಡನಾಟ ದೊರೆತದ್ದು, ಅವರ ಮುದ್ದು ಮುಖದಲ್ಲಿ ಮೂಡುವ ಮುಗ್ದ ನಗುವಿಗೆ ಸಾಕ್ಷಿಯಾಗಿದ್ದಕ್ಕೆ, ಎಲ್ಲ ಮಕ್ಕಳ ಅಪ್ಪ-ಅಮ್ಮಂದಿರ, ಶಾಲೆಯ ಶಿಕ್ಷಕರ ಪ್ರೀತಿಗೆ ಭಾಜನವಾಗಿದ್ದು ನಮ್ಮ ಪುಣ್ಯ ಮತ್ತು ಗರ್ವವೂ ಕೂಡ.

ಕೇವಲ ಪುಸ್ತಕ ವಿತರಣೆಗೆ ಸೀಮಿತವಾಗದೆ ಹಳ್ಳಿಯ ಮಕ್ಕಳಿಗೆ ಇನ್ನಷ್ಟು ಕೆಲಸಗಳನ್ನು ದಾಟಿಸುವ ಪ್ರಯತ್ನವಾಗಿ ವಿಜ್ಞಾನದ ಪ್ರಯೋಗಗಳು, ಮುಂದೆ ವೃತ್ತಿಯಲ್ಲಿರುವ ವಿವಿಧ ಮಾರ್ಗಗಳನ್ನು ತಿಳಿಸುವ ಕಾರ್ಯಾಗಾರಗಳು, ಆರೋಗ್ಯದ ತಿಳುವಳಿಕೆ & ಶಿಬಿರಗಳು, ಕಂಪ್ಯೂಟರ್ ತರಬೇತಿಗಳನ್ನೂ ಕೂಡ ಅವಿರತ ಹಮ್ಮಿಕೊಳ್ಳುತ್ತಾ ನಡೆದಿದೆ.

ಕಲೆ-ಸಾಹಿತ್ಯ ಅವಿರತದ ಇನ್ನೊಂದು ಸದಭಿರುಚಿಯ ಕಾರ್ಯಕ್ಷೇತ್ರ. ಕನ್ನಡದ ಸಾಹಿತಿಗಳ ಸಾಹಿತ್ಯದ ತಿಳುವಳಿಕೆಯನ್ನು ಹೆಚ್ಚಿಸುವ ಕಮ್ಮಟಗಳನ್ನು, ವಿವಿಧ ಸಂಗೀತ ಕಾರ್ಯಕ್ರಮಗಳನ್ನು, ಉತ್ತಮ ನಾಟಕಗಳ & ಕಲಾತ್ಮಕ ಚಲನ ಚಿತ್ರಗಳ ಪ್ರದರ್ಶನ ಹಾಗೂ ಸಂವಾದಗಳನ್ನು ಅಲ್ಲದೇ ಹೊಸ ಪ್ರತಿಭೆಗಳನ್ನು ಉತ್ತೇಜಿಸುವ ಕಾರ್ಯವನ್ನು ಅವಿರತ ಕಳೆದ ೧೦ ವರ್ಷಗಳಿಂದ ಮಾಡುತ್ತಾ ಬಂದಿದೆ.
ಅವಿರತದ ನಿರಂತರ ಕೆಲಸಗಳಿಗೆ, ಬೆಳವಣಿಗೆಗೆ ನಿಮ್ಮೆಲ್ಲರ ತನು-ಮನ-ಧನದ ಸಹಕಾರ ಪ್ರೋತ್ಸಾಹ ಅವಶ್ಯ. 

೧೦ ವರ್ಷ ಪೂರೈಸಿದ ಸಂಭ್ರಮಕ್ಕೆ, ಸಂಗೀತ ದಿಗ್ಗಜ ಸಿ. ಅಶ್ವತ್ಥ್ ಅವರ ಚಲನ ಚಿತ್ರಗೀತೆಗಳ ಕಾರ್ಯಕ್ರಮವನ್ನು ಡಿಸೆಂಬರ್ ೧೭ರಂದು ಸಂಜೆ ೬ಕ್ಕೆ ಚೌಡಯ್ಯ ಸ್ಮಾರಕ ಭವನದಲ್ಲಿ ಏರ್ಪಡಿಸಿದೆ. ಪ್ರವೀಣ್ ಡಿ ರಾವ್ & ತಂಡದವರ ಸಂಗೀತ ಸಂಯೋಜನೆಯಲ್ಲಿ ಸಿ. ಅಶ್ವತ್ಥ್ ಗಾನ ಸುಧೆ ಹರಿಯಲಿದೆ.


ಬನ್ನಿ, ಸಂಗೀತ ಸಂಭ್ರಮಕ್ಕೆ ಭಾಗಿಯಾಗಿ.

ರವಿ ಕುಲಕರ್ಣಿ,
ಅವಿರತ ಪ್ರತಿಷ್ಠಾನ